ನೀವೇನಾದರೂ ದನ, ಕರು, ಎಮ್ಮೆಯನ್ನು ಸಾಕಾಣಿಕೆ ಮಾಡುತ್ತಿದ್ದೀರಾ? ಹಾಗಿದ್ದರೆ ಈ ಮಾಹಿತಿ ನಿಮಗಾಗಿ. ಸರ್ಕಾರವು ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿರುವ ರೈತರಿಗೆ ಭರ್ಜರಿ ಗುಡ್ ನ್ಯೂಸ್ ನೀಡಿದೆ! ಹೌದು ಪಶುಪಾಲನಾ ಹಾಗೂ ಪಶುವೈದ್ಯ ಸೇವಾ ಇಲಾಖೆಯು ಹೈನುಗಾರಿಕೆಯಲ್ಲಿ ತೊಡಗಿಸಿಕೊಂಡಿರುವ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಹಾಯಧನವನ್ನು ನೀಡುತ್ತಿದ್ದು, ಅರ್ಹ ರೈತರು ಈ ಯೋಜನೆಯ ಲಾಭವನ್ನು ಪಡೆದುಕೊಳ್ಳಲು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬೇಕಾಗುತ್ತದೆ.
ಹೈನುಗಾರಿಕೆ ಮಾಡುವ ರೈತರಿಗೆ ದನ, ಕರು, ಮೇಕೆ, ಎಮ್ಮೆಗಳೇ ಆದಾಯದ ಮೂಲವಾಗಿರುತ್ತದೆ. ಇದರಿಂದಾಗಿ ಅವುಗಳನ್ನು ಸಮರ್ಪಕವಾಗಿ ಪೋಷಣೆ ಮಾಡುವುದು ಅತ್ಯಾವಶ್ಯಕವಾಗುತ್ತದೆ. ಜಾನುವಾರುಗಳಿಗೆ ಅಗತ್ಯವಾದ ಆಹಾರವನ್ನು ಒದಗಿಸುವುದರಿಂದ ಹಿಡಿದು ಅವುಗಳ ಆರೋಗ್ಯದ ಕಡೆ ಗಮನ ಕೊಡುವುದು ಬಹಳ ಮುಖ್ಯವಾಗಿರುತ್ತದೆ.
ಜಾನುವಾರುಗಳು ಸುಲಭವಾಗಿ ಜೀರ್ಣಿಸಿಕೊಳ್ಳಲು ಹುಲ್ಲನ್ನು ಸಣ್ಣದಾಗಿ ಕತ್ತರಿಸುವುದು ಅಗತ್ಯವಾಗಿದ್ದು, ರೈತರಿಗೆ ಇರರಿಂದಾಗಿ ಅಪಾರ ಸಮಯ ವ್ಯರ್ಥವಾಗುತ್ತದೆ. ಇದಕ್ಕಾಗಿಯೇ ಸರ್ಕಾರವು ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಹಾಯಧನವನ್ನು ನೀಡುವ ಮೂಲಕ ರೈತರ ನೆರವಿಗೆ ನಿಂತಿದೆ. ಮೇವು ಕತ್ತರಿಸುವ ಯಂತ್ರವನ್ನು ಬಳಸುವುದರಿಂದ ರೈತರ ಶ್ರಮ ಕಡಿಮೆಯಾಗುವುದರ ಜೊತೆಗೆ ಮೇವುಗಳು ಕೂಡ ವ್ಯರ್ಥವಾಗುವುದು ಕಡಿಮೆಯಾಗುತ್ತದೆ.
ಸಹಾಯಧನವನ್ನು ನೀಡುವುದರ ಹಿಂದಿನ ಮೂಲ ಕಾರಣ:
1. ಕೃಷಿ ಯಾಂತ್ರಿಕರಣವನ್ನು ಉತ್ತೇಜಿಸುವುದು:
ಈ ಹಿಂದೆ ರೈತರು ಕೈಯಲ್ಲಿ ಹುಲ್ಲನ್ನು ಕತ್ತರಿಸಿ ಜಾನುವಾರುಗಳಿಗೆ ಮೇವನ್ನು ಹಾಕುತ್ತಿದ್ದರು ಇದು ಹೆಚ್ಚು ಶ್ರಮವನ್ನು ಹಾಗೂ ಸಮಯವನ್ನು ವ್ಯರ್ಥ ಮಾಡುತ್ತದೆ. ಇದಕ್ಕಾಗಿಯೇ, ರೈತರು ಸಾಂಪ್ರದಾಯಿಕವಾಗಿ ಮೇವು ಕತ್ತರಿಸುವುದಕ್ಕೆ ಗುಡ್ ಬಾಯ್ ಹೇಳಿ ಕಡಿಮೆ ಅವಧಿಯಲ್ಲಿ ಹೆಚ್ಚು ಕೆಲಸವನ್ನು ಮಾಡುವ ಆಧುನಿಕ ಯಂತ್ರೋಪಕರಣಗಳನ್ನು ತಮ್ಮ ಹೈನುಗಾರಿಕೆಯಲ್ಲಿ ಅಳವಡಿಸಿಕೊಳ್ಳುವಂತೆ ಉತ್ತೇಜಿಸುವುದು ಸರ್ಕಾರದ ಮೂಲ ಉದ್ದೇಶವಾಗಿದೆ.
2. ರೈತರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದು:
ಈ ಆಧುನಿಕ ಜಗತ್ತಿನಲ್ಲಿ ಎಲ್ಲವೂ ಆಧುನೀಕರಣ ಹಾಗೂ ಯಾಂತ್ರಿಕರಣವಾಗಿದ್ದು, ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೇವು ಕತ್ತರಿಸುವ ಯಂತ್ರಗಳ ಕೊಳ್ಳಲು ಅದರ ಬೆಲೆ ದುಬಾರಿಯೆನಿಸುತ್ತದೆ. ಇದಕ್ಕಾಗಿಯೇ ಸರ್ಕಾರವು ಯಂತ್ರವನ್ನು ಖರೀದಿಸಲು ಸಹಾಯಧನವನ್ನು ನೀಡುವ ಮೂಲಕ ಅವರ ಆರ್ಥಿಕ ಹೊರೆಯನ್ನು ಕಡಿಮೆ ಮಾಡುವುದರ ಜೊತೆಗೆ ಹೈನುಗಾರಿಕೆ ಕ್ಷೇತ್ರವನ್ನು ಅಭಿವೃದ್ಧಿ ಪಡಿಸಲು ಮುಂದಾಗಿದೆ.
3. ಜಾನುವಾರುಗಳ ಆರೋಗ್ಯವನ್ನು ವೃದ್ಧಿಸುವುದು:
ಮೇವು ಕತ್ತರಿಸು ಯಂತ್ರದ ಮೂಲಕ ಸುಲಭವಾಗಿ ಹುಲ್ಲನ್ನು ಸಣ್ಣದಾಗಿ ಕತ್ತರಿಸುವ ಮೂಲಕ ಜಾನುವಾರುಗಳ ಜೀರ್ಣಶಕ್ತಿಯನ್ನು ಹೆಚ್ಚಿಸಿ, ಹಾಲಿನ ಇಳುವರಿಯನ್ನು ಹೆಚ್ಚಿಸುವ ಜೊತೆಗೆ ಅದರ ಆರೋಗ್ಯವು ಕೂಡ ಸುಧಾರಣೆಯಾಗುತ್ತದೆ.
4. ಲಾಭದಾಯಕ ಹೈನುಗಾರಿಕೆಯಾಗಿ ರೂಪಿಸುವುದು:
ರೈತರು ಜಾನುವಾರುಗಳಿಗೆ ಮೇವನ್ನು ಕತ್ತರಿಸದೆ ಹಾಗೆಯೇ ಹಾಕಿದರೆ ಮಧ್ಯಭಾಗದ ಮೇವನ್ನು ಮಾತ್ರ ಸೇವನೆ ಮಾಡಿ ಉಳಿದ ಭಾಗವನ್ನು ಹಾಗೆಯೇ ಬಿಟ್ಟುಬಿಡುತ್ತದೆ. ಇದರಿಂದಾಗಿ ಮೇವು ವ್ಯರ್ಥವಾಗುತ್ತದೆ. ಆದರೆ ಮೇವು ಕತ್ತರಿಸುವ ಯಂತ್ರವನ್ನು ಬಳಕೆ ಮಾಡುವುದರಿಂದ ಮೇವನ್ನು ಸಣ್ಣದಾಗಿ ಕಟಾವು ಮಾಡುವುದರಿಂದ ಮೇವಿನ ವೆಚ್ಚವು ಕಡಿಮೆಯಾಗುವುದರ ಜೊತೆಗೆ ಹೈನುಗಾರಿಕೆಗೆ ಹೆಚ್ಚಿನ ಲಾಭವನ್ನು ತಂದುಕೊಡುತ್ತದೆ.
ರೈತರಿಗಾಗುವ ಪ್ರಯೋಜನಗಳು:
- ರೈತರ ಸಮಯ ಮತ್ತು ಶ್ರಮವನ್ನು ಕಡಿಮೆಯಾಗುತ್ತದೆ.
- ಹುಲ್ಲುಗಳನ್ನು ಸಣ್ಣದಾಗಿ ಕತ್ತರಿಸುವುದರಿಂದ ಸಂಗ್ರಹಣೆ ಮಾಡಲು ಸ್ವಲ್ಪ ಜಾಗ ಸಾಕಾಗುತ್ತದೆ.
- ಜಾನುವಾರಗಳ ಜೀರ್ಣಕ್ರಿಯೆ ಸುಲಭವಾಗುವುದರಿಂದ ಹೆಚ್ಚಿನ ಹಾಲು ಉತ್ಪಾದನೆಯಾಗುತ್ತದೆ ಜೊತೆಗೆ ಅರೋಗ್ಯ ಮಟ್ಟವು ಸುಧಾರಿಸುತ್ತದೆ.
- ಸರ್ಕಾರವು ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಹಾಯಧನ ನೀಡುವುದರಿಂದ ರೈತರಿಗೆ ಸ್ವಲ್ಪ ಮಟ್ಟಿಗೆ ಹಣಕಾಸಿನ ಸಹಾಯವಾಗುತ್ತದೆ.
- ರೈತರು ಕೃಷಿ ಹಾಗೂ ಹೈನುಗಾರಿಕೆಯಲ್ಲಿ ತಮ್ಮನ್ನು ತಾವು ಹೆಚ್ಚು ತೊಡಗಿಸಿಕೊಳ್ಳುವುದು.
ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಿಗುವ ಸಹಾಯಧನ:
ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಕೆಲವೊಂದು ವರ್ಗಗಳಿಗೆ ಅನುಗುಮವಾಗಿ ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡಲಾಗುತ್ತಿದ್ದು, ಈ ಎಲ್ಲಾ ವಿವರಗಳನ್ನು ಈ ಕೆಳಗಿನ ಹಂತದಲ್ಲಿ ನೀಡಲಾಗಿದೆ.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ರೈತರಿಗೆ:
- ಒಟ್ಟು ಯಂತ್ರದ ಮೊತ್ತ: ₹49,594
- ಒಟ್ಟು ಸಬ್ಸಿಡಿ ಮೊತ್ತ: ₹27,844
- ರೈತರು ಪಾವತಿಸಬೇಕಾದ ಒಟ್ಟು ಮೊತ್ತ: ₹21,750
ಸಾಮಾನ್ಯ ವರ್ಗದ ರೈತರಿಗೆ:
- ಒಟ್ಟು ಯಂತ್ರದ ಮೊತ್ತ: ₹49,594
- ಒಟ್ಟು ಸಬ್ಸಿಡಿ ಮೊತ್ತ: ₹15,469
- ರೈತರು ಪಾವತಿಸಬೇಕಾದ ಒಟ್ಟು ಮೊತ್ತ: ₹34,125
ಸಹಾಯಧನವನ್ನು ಪಡೆಯಲು ಅರ್ಹರಾದ ರೈತರು:
- ಅರ್ಜಿದಾರರು ಕರ್ನಾಟಕದ ಖಾಯಂ ನಿವಾಸಿಯಾಗಿರುಬೇಕು.
- ಅರ್ಜಿದಾರರು ಹನುಗಾರಿಕೆಯಲ್ಲಿ ತೊಡಗಿರುವ ರೈತರಾಗಿದ್ದು, ಅವರ ಹೆಸರಿನಲ್ಲಿ ಕೃಷಿಭೂಮಿ ಇರಬೇಕು.
- ರೈತರು ಈ ಯೋಜನೆಯಡಿಯಲ್ಲಿ ಪ್ರಯೋಜನವನ್ನು ಪಡಿಯಬೇಕಾದರೆ ಕನಿಷ್ಠ 2 ರಿಂದ 3 ಜಾನುವಾರುಗಳನ್ನು ಹೊಂದಿರಬೇಕು.
- ಸಣ್ಣ ಮತ್ತು ಅತಿ ಸಣ್ಣ ರೈತರಿಗೆ ಮೊದಲ ಆದ್ಯತೆ ನೀಡಲಾಗುವುದು.
- ಈ ಹಿಂದೆ ಕೃಷಿ ಇಲಾಖೆ ಅಥವಾ ಪಶುಸಂಗೋಪನಾ ಇಲಾಖೆಯನ್ನು ಯಾವುದೇ ಪ್ರಯೋಜನವನ್ನು ಪಡೆದುಕೊಂಡಿರಬಾರದು.
ರೈತರು ಹೊಂದಿರಬೇಕಾದ ಅಗತ್ಯ ದಾಖಲೆಗಳು:
- ಆಧಾರ್ ಕಾರ್ಡ್
- ಬ್ಯಾಂಕ್ ಪಾಸ್ ಬುಕ್ ಪ್ರತಿ
- ಜಮೀನು ದಾಖಲೆ
- ಜಾನುವಾರು ದೃಢೀಕರಣ ಪತ್ರ
- ಜಾತಿ ಮತ್ತು ಆದಾಯ ಪ್ರಮಾಣ ಪತ್ರ
- ಇತ್ತೀಚಿನ ಪಾಸ್ಪೋರ್ಟ್ ಅಳತೆಯ ಫೋಟೋ
- ಸಣ್ಣ ಮತ್ತು ಅತಿ ಸಣ್ಣ ರೈತ ಪ್ರಮಾಣ ಪತ್ರ
ಅರ್ಜಿ ಸಲ್ಲಿಸುವ ವಿಧಾನ:
ಅರ್ಹ ಫಲಾನುಭವಿಗಳು ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಹಾಯಧನವನ್ನು ಪಡೆದುಕೊಳ್ಳಬೇಕಾದರೆ ಈ ಕೆಳಗೆ ನೀಡಿರುವ ರೀತಿಯಲ್ಲಿ ಅರ್ಜಿಯನ್ನು ಸಲ್ಲಿಸಿ.
ಆನ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ರೈತರು ಕೃಷಿ ಅಥವಾ ಪಶುಸಂಗೋಪನಾ ಇಲಾಖೆಯ ಅಧಿಕೃತ ವೆಬ್ಸೈಟ್ https://kkisan.karnataka.gov.in/ ಗೆ ಭೇಟಿ ನೀಡಿ.
- ಮೊಬೈಲ್ ನಂಬರ್ ನಮೂದಿಸಿ ಲಾಗಿನ್ ಆಗಿ.
- ಅರ್ಜಿ ನಮೂನೆಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿಮಾಡಿ.
- ಅಗತ್ಯ ದಾಖಲೆಗಳನ್ನು ಅಪ್ಲೋಡ್ ಮಾಡಿ ಅರ್ಜಿ ಸಲ್ಲಿಸಿ.
ಆಫ್ಲೈನ್ ಮೂಲಕ ಅರ್ಜಿ ಸಲ್ಲಿಸುವ ವಿಧಾನ:
- ಅರ್ಹ ರೈತರು ನಿಮ್ಮ ತಾಲೂಕಿನ ಕೃಷಿ ಅಥವಾ ಪಶುಪಾಲನಾ ಇಲಾಖೆಯ ಕಚೇರಿಗೆ ಭೇಟಿ ನೀಡಿ.
- ಅಲ್ಲಿ ಮೇವು ಕತ್ತರಿಸುವ ಯಂತ್ರಕ್ಕೆ ಅರ್ಜಿ ಪ್ರತಿಯನ್ನು ಕೇಳಿ ಪಡೆಯಿರಿ.
- ನಂತರ ಅರ್ಜಿ ಪ್ರತಿಯಲ್ಲಿ ಕೇಳಿರುವ ಎಲ್ಲಾ ಮಾಹಿತಿಯನ್ನು ಸರಿಯಾಗಿ ಭರ್ತಿ ಮಾಡಿ
- ಅಗತ್ಯ ದಾಖಲೆಗಳೊಂದಿಗೆ ಅರ್ಜಿ ಪ್ರತಿಯನ್ನು ಇಲಾಖೆಗೆ ಸಲ್ಲಿಸಿ ಸ್ವೀಕೃತಿ ಪತ್ರ ಪಡೆದುಕೊಳ್ಳಿ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:
ಕೃಷಿ ಇಲಾಖೆ ಸಹಾಯವಾಣಿ: 1800 425 3553
ಪಶುಪಾಲನಾ ಸಹಾಯವಾಣಿ: 8277100200
ಕೊನೆಯ ಮಾತು:
ಕರ್ನಾಟಕ ಸರ್ಕಾರವು ಹೈನುಗಾರಿಕೆಯನ್ನುಹಾಗೂ ಪಶುಪಾಲನೆಯನ್ನು ಉತ್ತೇಜಿಸುವ ಉದ್ದೇಶದಿಂದ ರೈತರಿಗೆ ಮೇವು ಕತ್ತರಿಸುವ ಯಂತ್ರವನ್ನು ಖರೀದಿಸಲು ಸಬ್ಸಿಡಿ ರೂಪದಲ್ಲಿ ಸಹಾಯಧನವನ್ನು ನೀಡುತ್ತಿದ್ದು, ಕೆಲವು ವರ್ಗಗಳಿಗೆ ಅನುಗುಣವಾಗಿ ಸಬ್ಸಿಡಿ ನೀಡಲಾಗುತ್ತಿದೆ. ಈ ಸಹಾಯಧನವನ್ನು ಪಡೆಯಲು ಈಗಾಗಲೇ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ಅರ್ಹ ರೈತರು ಇಂದೇ ಅರ್ಜಿ ಸಲ್ಲಿಸಿ ಇದರ ಲಾಭವನ್ನು ಪಡೆದುಕೊಳ್ಳಿ.
ಇದನ್ನು ಗಮನಿಸಿ: Dairy Farming : ಹಸು ಸಾಕಾಣಿಕೆಗೆ ₹1.25 ಲಕ್ಷ ಸಹಾಯಧನ.! ಬೇಗ ಅರ್ಜಿ ಸಲ್ಲಿಸಿ!







